ಅಕ್ಷಯ ತೃತೀಯ
ವೈಶಾಖ ಶುಕ್ಲ ಪಕ್ಷದ ತೃತೀಯ ತಿಥಿಯನ್ನು ಅಕ್ಷಯ ತೃತೀಯ ಎಂದು ಕರೆಯುತ್ತಾರೆ.ಹಿಂದೂ ಸಂಪ್ರದಾಯದ ಪ್ರಕಾರ ಪ್ರಸಿದ್ಧವಾಗಿರುವ ಮೂರೂವರೆ ಮುಹೂರ್ತಗಳಲ್ಲಿ ಇದೂ ಒಂದು.( ಮಿಕ್ಕವು ಯುಗಾದಿ, ವಿಜಯದಶಮಿ ಮತ್ತು ಬಲಿಪಾಡ್ಯಮಿಯ ಅರ್ಧ ಮುಹೂರ್ತವು ಪ್ರಸಿದ್ಧವಾದುದು).ಈ ದಿನ ಅನೇಕ ಪುರಾಣ ಘಟನೆಗಳು ಸಂಭವಿಸಿವೆ.ಪರಶುರಾಮ ಜಯಂತಿ,ಕೃತಯುಗದ ಪ್ರಾರಂಭ,ಗಣಪತಿಯು ಮಹಾಭಾರತವನ್ನು ಬರೆಯಲು ಪ್ರಾರಂಭಿಸಿದ ದಿನ,ಬ್ರಹ್ಮನು ಸೃಷ್ಟಿಯನ್ನು ಪ್ರಾರಂಭಿಸಿದ ದಿನ, ಭೂಮಿಯಲ್ಲಿ ಮೊಟ್ಟಮೊದಲಿಗೆ ಗಂಗಾವತರಣವಾದ ದಿನ, ಧರ್ಮರಾಯನಿಗೆ ಸೂರ್ಯನಿಂದ ಅಕ್ಷಯಪಾತ್ರೆ ಸಿಕ್ಕಿದ ದಿನ,ಕೃಷ್ಣನು ದ್ರೌಪದಿಗೆ ಅಕ್ಷಯಾಂಬರವನ್ನು ನೀಡಿದ ದಿನ,ಕುಬೇರನು ಮಹಾಲಕ್ಷ್ಮಿಯಿಂದ ಸಂಪತ್ತಿನ ಜವಾಬ್ದಾರಿಯನ್ನು ಪಡೆದ ದಿನ,ಸುದಾಮನು ಕೃಷ್ಣನನ್ನು ಭೇಟಿಯಾದ ದಿನ ಇತ್ಯಾದಿ. ಅಕ್ಷಯವೆಂದರೆ ಕ್ಷಯವಿಲ್ಲದ್ದು,
ಈ ದಿನ ರೋಹಿಣಿ ನಕ್ಷತ್ರವಿದ್ದರೆ ಅದು ಇನ್ನಷ್ಟು ಪವಿತ್ರವಾದ ದಿನವಾಗುತ್ತದೆ. ಈ ದಿನದಂದು ಸೂರ್ಯಚಂದ್ರರು ಉಚ್ಚ ಸ್ಥಾನದಲ್ಲಿರುತ್ತಾರೆ.ಮಾಡಿದ ಧರ್ಮ-ಕರ್ಮಗಳ ಫಲ ಅನಂತವಾಗಿರುತ್ತದೆ.ಈ ದಿನ ಚಿನ್ನ ಬೆಳ್ಳಿಗಳನ್ನು ಕೊಂಡರೆ ಅದು ಅಕ್ಷಯವಾಗುತ್ತದೆ. ದಕ್ಷಿಣಾಯಣದಲ್ಲಿ ವಿಜಯದಶಮಿಯು ಪ್ರಮುಖ ತಿಥಿಯಾದರೆ, ಉತ್ತರಾಯಣದಲ್ಲಿ ಅಕ್ಷಯ ತೃತೀಯ ತಿಥಿಯು ಪ್ರಮುಖವಾಗಿದೆ.
-ಶ್ರೀಪಾದ.