ರಾಮು ಸುಬ್ಬು ಕುಟುಂಬದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳು.

ದೇವರ ಕೃಪೆಯಿಂದಲೂ, ಹಿರಿಯರ ಆಶೀರ್ವಾದದಿಂದಲೂ ನಮ್ಮ ಕುಟುಂಬದವರಿಗೆ ಸುಖ,ಶಾಂತಿ, ಸಮೃದ್ಧಿಗಳು ದೊರೆತಿರುವುದು ಎಂಬುದನ್ನು ನಮ್ಮ ಹಿರಿಯರು ಮನಗಂಡಿದ್ದರು.ಅದರಂತೆ ನಮ್ಮ ಮುಂದಿನ ಜನಾಂಗವು ಸುಖ ಸಮೃದ್ಧಿಗಳಿಂದ ಬಾಳಲಿ ಎಂಬ ಸದುದ್ದೇಶದಿಂದ ಅನೇಕ ಧಾರ್ಮಿಕ ಕಾರ್ಯಗಳನ್ನು ಹಮ್ಮಿಕೊಂಡಿದ್ದರು ಮತ್ತು ಮುಂದಿನ ಜನಾಂಗವು ಪಾಲಿಸುವಂತೆ ವ್ಯವಸ್ಥೆ ಮಾಡಿದ್ದರು.ಇದನ್ನು ದೇವ ಋಣ ಮತ್ತು ಪಿತೃ ಋಣ ತೀರಿಸುವುದು ಎಂದು ಕರೆಯುತ್ತಾರೆ.
ನಮ್ಮ ಗೋತ್ರ: ಕಪಿಲ ಗೋತ್ರ.
ಹಿರಿಮನೆ: ದಿವಂಗತ ಹನುಮಂತ ಕೃಷ್ಣ ಶೆಟ್ಟಿ ಅವರ ಮನೆಯಲ್ಲಿ ಶ್ರೀ ವೆಂಕಟರಮಣ-ಪದ್ಮಾವತಿ ದೇವರ ಮೂರ್ತಿ ಇರುವುದರಿಂದ ಅಕ್ಷಯ ತೃತೀಯ ಇಲ್ಲಿಯೇ ಮಾಡಲಾಗುತ್ತದೆ ಮತ್ತು ಮಹಾಲಯವನ್ನು ಇದೇ‌ ಮನೆಯಲ್ಲಿ ಮಾಡಲಾಗುತ್ತಿತ್ತು. ಈ ಕಾರಣಗಳಿಂದ ಈ ಮನೆಯನ್ನು ಹಿರಿಮನೆಯೆಂದು ಕರೆಯುತ್ತಾರೆ.ಆದರೆ ಇದು ರೂಢಿಯಿಂದ ಮಾತ್ರ ಬಂದಿದ್ದು. ನಮ್ಮ ಗುರುಗಳಾದ ಶ್ರೀ ಅಭಿನವ ವಿಧ್ಯಾತೀರ್ಥ ಮಹಾಸ್ವಾಮಿಗಳು ಮತ್ತು ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳು ಇಲ್ಲಿಗೆ ಆಗಮಿಸಿ ಆಶೀರ್ವದಿಸಿದ್ದರು ಎಂಬುದು ಉಲ್ಲೇಖನೀಯ.
ಕುಟುಂಬದ ಯಜಮಾನ: ಕುಟುಂಬದಲ್ಲಿ ವಯಸ್ಸಿನಲ್ಲಿ ಹಿರಿಯ ವ್ಯಕ್ತಿ ಯೋಗ್ಯ ಆಗಿದ್ದಲ್ಲಿ ಕುಟುಂಬದ ಯಜಮಾನನಾಗುತ್ತಾನೆ.ಕುಟುಂಬಕ್ಕೆ ಮಾರ್ಗದರ್ಶನ ಮಾಡುವುದು,ಅಕ್ಷಯ ತೃತೀಯ ಪೂಜೆ ಮತ್ತು ಮಹಾಲಯದಲ್ಲಿ ನೇತೃತ್ವ ವಹಿಸುವುದು ಅವರ ಕರ್ತವ್ಯವಾಗಿರುತ್ತದೆ.ಇದು ಎಲ್ಲರಿಗೂ ಸಿಗುವಂಥದ್ದಲ್ಲ. ಇದು ಪೂರ್ವಜನ್ಮದ ಸುಕೃತವೇ ಸರಿ.
ನಮ್ಮ ಕುಟುಂಬದವರಿಂದ ಆರಾಧಿಸಲ್ಪಡುವ ದೇವತೆಗಳು ಎಂದರೆ ಕುಲದೇವರಾದ ಶ್ರೀ ಮಹಾಲಸಾ ನಾರಾಯಣೀ ದೇವಿ,ಗ್ರಾಮದೇವರಾದ ಬಂಟ ದೇವರು,ಬಂಡಿಹಬ್ಬದ ಕಳಸ ದೇವತೆ,ಗಣಪತಿ, ಶ್ರೀ ವೆಂಕಟರಮಣ ಪದ್ಮಾವತಿ, ಜಟಕಾ,ಸುಬ್ರಹ್ಮಣ್ಯ,ಅಶ್ವಥ್ ಕಟ್ಟೆ ಮತ್ತು ಅಲ್ಲಿರುವ ನಾಗದೇವತೆ,ವಿಠ್ಠಲ ಸದಾಶಿವ ಮತ್ತು ಪಿತೃ ದೇವತೆಗಳು.
ಹಿಂದೆ ಎಲ್ಲಾ ದೇವತಾ ಕಾರ್ಯಗಳನ್ನು ಒಟ್ಟಿಗೆ ಸೇರಿ ನೆರವೇರಿಸುತ್ತಿದ್ದರು.ನಂತರ 1888 ರಲ್ಲಿ ಆಗಿನ ಐದು ಜನ ಸದಸ್ಯರಿಗೆ ಪ್ರತ್ಯೇಕ ಮನೆಗಳ ನಿರ್ಮಾಣ ಮಾಡಿದ್ದರಿಂದ ದೇವತಾ ಕಾರ್ಯಗಳನ್ನು ಐದು ವರ್ಷಗಳಿಗೊಮ್ಮೆ ಸರತಿಯಂತೆ ಬರುವಂತೆ ಏರ್ಪಾಡು ಮಾಡಲಾಯಿತು. ಅವುಗಳು ಅಕ್ಷಯ ತೃತೀಯಾ,ಜಟಕ ಸಮಾರಾಧನೆ,ಅಮದಳ್ಳಿ ಬಂಡಿಹಬ್ಬ,ಶ್ರಾವಣದಲ್ಲಿ ಬಂಟ ದೇವರಿಗೆ ಪೂಜೆ,ಆಶ್ವೀಜ ಮಾಸದ ಏಕಾದಶಿಯಂದು ಶ್ರೀ ವಿಠ್ಠಲ ಸದಾಶಿವ ದೇವರಿಗೆ ಪೂಜೆ ಮತ್ತು ಕಾರ್ತಿಕ ಮಾಸದ ತ್ರಯೋದಶಿಯಂದು ಶ್ರೀ ವಿಠ್ಠಲ ಸದಾಶಿವ ದೇವಸ್ಥಾನದಲ್ಲಿ ಭಜನೆ.
ಈ ಮೇಲಿನ ದೇವತಾ ಕಾರ್ಯಕ್ರಮಗಳ ಹೊರತಾಗಿ ಇನ್ನೂ ಕೆಲವು ದೇವತಾ ಆರಾಧನೆಗಳನ್ನು ಮನೆಯವರಿಗೆ ಹಂಚಿಕೊಡಲಾಯಿತು.ಅವುಗಳ ವಿವರ ಈ ಕೆಳಗಿನಂತಿದೆ:
1)ರಾಯ ಬಂಟು ಶೆಟ್ಟಿ-ಗಣಪತಿ ಪೂಜೆ.
2)ಕೃಷ್ಣ ನಾಗಪ್ಪ ಶೆಟ್ಟಿ-___
3)ವೆಂಕಟರಮಣ ನಾಗಪ್ಪ ಶೆಟ್ಟಿ-ಶಿವರಾತ್ರಿ ಷಷ್ಠಿ
4)ಸಾಂತಪ್ಪ ಸುಬ್ಬ ಶೆಟ್ಟಿ-ಚಂಪಾಷಷ್ಠಿ
5)ಪುಂಡರೀಕ ಸುಬ್ಬ ಶೆಟ್ಟಿ- ನವರಾತ್ರಿ ಷಷ್ಠಿ.
ಆದರೆ ಕೆಲವು ವರ್ಷಗಳ ನಂತರ ಮನೆ ನಂಬರ್ 1 ಕ್ಕೆ ಆರ್ಥಿಕ ಸಂಕಷ್ಟ ಒದಗಿ ಬಂದಿದ್ದರಿಂದ ಗಣಪತಿ ಪೂಜೆಯನ್ನು ಮನೆ ನಂಬರ್ 3 ಕ್ಕೆ ಮತ್ತು ಶಿವರಾತ್ರಿ ಷಷ್ಠಿಯನ್ನು ಮನೆ ನಂಬರ್ 2 ಕ್ಕೆ ವರ್ಗಾಯಿಸಲಾಯಿತು.
ದೇವತಾ ಕಾರ್ಯಕ್ರಮಗಳಲ್ಲಿ ನಡೆಸಲು ತಗಲುವ ಖರ್ಚು-ವೆಚ್ಚಗಳನ್ನು ಸರಿದೂಗಿಸಲು ಶ್ರೀ ವೆಂಕಟರಮಣ ದೇವರ ಹೆಸರಿನಲ್ಲಿ ಹೊಲವನ್ನು ಇಡಲಾಯಿತು.ಪ್ರತಿ ವರ್ಷ 12 ಖಂಡಗ ಅಕ್ಕಿ (1 ಖಂಡಗ=20 ಕೊಳಗ).ಅದರಲ್ಲಿ 10 ಖಂಡಗ ಅಕ್ಷಯ ತೃತೀಯಾ ನಡೆಸಲು,1 ಖಂಡಗ ಜಟಕ ಸಮಾರಾಧನೆಗೆ, 1 ಖಂಡಗ ಅಮದಳ್ಳಿ ಬಂಟದೇವರ ಸೇವೆಗೆ ಇಡಲಾಗುತ್ತಿತ್ತು.ಆದರೆ 1973 ರ ಭೂ ಸುಧಾರಣಾ ಕಾಯ್ದೆಯಿಂದ ದೇವರ ಹೆಸರಿನಲ್ಲಿ ಇಟ್ಟ ಹೊಲವು ರೈತರ ಪಾಲಾಗಿ ಉತ್ಪನ್ನ ಬರುವುದು ನಿಂತುಹೋಯಿತು.ಇದರಿಂದ ಖರ್ಚುವೆಚ್ಚಗಳನ್ನು ವೈಯಕ್ತಿಕವಾಗಿ ತೆರುವುದು ಅನಿವಾರ್ಯವಾಯಿತು.
ಅಕ್ಷಯ ತ್ರತೀಯ ಪೂಜೆಯನ್ನು ಯಜಮಾನನು ನಡೆಸುವ ಪರಂಪರೆಯನ್ನು ನಮ್ಮ ಹಿರಿಯರು ಹಾಕಿಕೊಟ್ಟಿರುವುದು ಅವರ ಮುತ್ಸದ್ದಿತನ, ದೂರದೃಷ್ಟಿಯ ದ್ಯೋತಕವಾಗಿರುತ್ತದೆ.ಈ ಒಂದು ಕಾರಣದಿಂದಲೇ ಅಕ್ಷಯ ತೃತಿಯಾ ಪೂಜೆಯು ವ್ಯಯಕ್ತಿಕ ಮಟ್ಟಕ್ಕೆ ಇಳಿಯದೆ ವಿಜೃಂಭಣೆಯಿಂದ ನಡೆಯುತ್ತಿದೆ ಮತ್ತು ನಮ್ಮ ಸಮಾಜದಲ್ಲಿ ಎಲ್ಲಿಯೂ ಕಾಣದ ಒಗ್ಗಟ್ಟು ನಮ್ಮ ಕುಟುಂಬದಲ್ಲಿ ವಿಶೇಷವಾಗಿದೆ.ಧಾರ್ಮಿಕ ಕಾರ್ಯಕ್ರಮಗಳ ಖರ್ಚುಗಳನ್ನು ವ್ಯಯಕ್ತಿಕವಾಗಿ ಭರಿಸುತ್ತಿದ್ದರೂ ಕುಟುಂಬದ ಕಾರ್ಯಕ್ರಮವೆಂದು ಬಗೆದು ಹಿರಿಯರ ಆಶಯದಂತೆ ಯಜಮಾನನಿಗೆ ಸೂಕ್ತ ಗೌರವ ಕೊಡುವುದು ಯೋಗ್ಯವಾದುದು.
ಸ್ವರ್ಗದಲ್ಲಿರುವ ನಮ್ಮ ಹಿರಿಯರ ಆತ್ಮಕ್ಕೆ ತೃಪ್ತಿಯಾಗುವಂತೆ ಹಾಗೂ ಮುಂದಿನ ಜನಾಂಗದ ಶ್ರೇಯಸ್ಸಿಗೆ ಹಿರಿಯರು ಆರಂಭಿಸಿದ ಧಾರ್ಮಿಕ ಕಾರ್ಯಕ್ರಮಗಳನ್ನು ಆಚರಿಸಿ ಮುಂದುವರೆಸಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯವಾಗಿದೆ.
ಶ್ರೀಪಾದ.
23/04/2020.

Related Articles

Stay Connected

22,037FansLike
2,507FollowersFollow
0SubscribersSubscribe
- Advertisement -spot_img

Latest Articles